ಮಂಗಳವಾರ, ಫೆಬ್ರವರಿ 18, 2020

ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮ
ಆನ್‍ಲೈನ್ ಖರೀದಿ ಮುನ್ನ ವೆಬ್‍ಸೈಟ್ ನೈಜತೆ ಪರಿಶೀಲಿಸಿ
- ಡಿಎಸ್‍ಪಿ ವೆಂಕಟೇಶ್ ಉಗಿಬಂಡಿ
ಯಾದಗಿರಿ, ಫೆಬ್ರುವರಿ 18 (ಕರ್ನಾಟಕ ವಾರ್ತೆ): ಅಗತ್ಯವಿರುವ ವಸ್ತುಗಳನ್ನು ಆನ್‍ಲೈನ್ ಮೂಲಕ ಖರೀದಿಸುವಾಗ ವೆಬ್‍ಸೈಟ್‍ಗಳ ನೈಜತೆಯ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಂಡು ವ್ಯವಹಾರ ಮಾಡಬೇಕು ಎಂದು ಸುರಪುರ ಡಿಎಸ್‍ಪಿ ವೆಂಕಟೇಶ್ ಉಗಿಬಂಡಿ ಅವರು ಸಲಹೆ ನೀಡಿದರು.ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಹಾಗೂ ಎಸ್‍ಬಿಐ ಬ್ಯಾಂಕ್ ಸಹಯೋಗದೊಂದಿಗೆ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಾಮಾಜಾಲತಾಣಗಳಿಂದಾಗುವ ದುರುಪಯೋಗ ಮತ್ತು ಕಾನೂನಿನ ಕ್ರಮಗಳ ಕುರಿತು ವಿವರಿಸಿದರು.ಸಾರ್ವಜನಿಕರು ಅಥವಾ ಗ್ರಾಹಕರು ತಮ್ಮ ಎಟಿಎಮ್ ಕಾರ್ಡ್‍ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕೊಡಬಾರದು. ಯಾವುದೇ ಕಾರಣಕ್ಕೂ ಫೋನ್ ಕರೆ ಮೂಲಕ ಓಟಿಪಿ ಸಂಖ್ಯೆಗಳನ್ನು ಶೇರ್ ಮಾಡಬಾರದು. ಆನ್‍ಲೈನ್ ಮೂಲಕ ವ್ಯವಹಾರಗಳನ್ನು ಸ್ವತಃ ಮಾಡತಕ್ಕದ್ದು. ಬೇರೆಯವರ ಮೂಲಕ ಆನ್‍ಲೈನ್ ವ್ಯವಹಾರ ಮಾಡಿದರೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಂದು ವೇಳೆ ವಂಚನೆ ಬಗ್ಗೆ ಅನುಮಾನ ಇದ್ದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ, ನಿಮ್ಮ ಅಕೌಂಟನ್ನು ಬ್ಲಾಕ್ ಮಾಡಿಸಿ ಸಂಭವಿಸಬಹುದಾದ ಹೆಚ್ಚಿನ ನಷ್ಟವನ್ನು ತಡೆಯಬಹುದು ಎಂದು ಹೇಳಿದರು.
ಅವಹೇಳನಕಾರಿ, ಪ್ರಚೋದನಕಾರಿ ಅಥವಾ ಇನ್ನೊಬ್ಬರಿಗೆ ಮಾನಹಾನಿಯಾಗುವಂತಹ ಪೋಸ್ಟ್‍ಗಳನ್ನು ಹಾಕಿ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.
ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕರಾದ ರಾಮಕೃಷ್ಣ ಶಣೈ ಅವರು ಮಾತನಾಡಿ, ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿದೆ ಎಂಬುದಾಗಿ ಎಲ್.ಐ.ಸಿ ಏಜೆಂಟ್ ಅಥವಾ ಬ್ಯಾಂಕ್ ಪ್ರತಿನಿಧಿಗಳೆಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಓಟಿಪಿ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂತಹ ಅಪರಿಚಿತ ಕರೆಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು. ಎಟಿಎಂ ಕಾರ್ಡ್ ಬಳಕೆ ಮಾಡಲು ಗೊತ್ತಿಲ್ಲದಿದ್ದಾಗ ಅಪರಿಚಿತ ವ್ಯಕ್ತಿಗಳ ಕೈಯಲ್ಲಿ ಎಟಿಎಮ್ ಕಾರ್ಡ್ ಕೊಟ್ಟರೆ ಅವರು ನಿಮ್ಮ ಗಮನಕ್ಕೆ ಬಾರದಂತೆ ಅದನ್ನು ಕ್ಲೋನಿಂಗ್ ಮಾಡುವ, ಎಟಿಎಂ ಕಾರ್ಡನ್ನೇ ಬದಲಾಯಿಸುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದರು.
ಬ್ಯಾಂಕ್ ಖಾತೆ ಮಾಹಿತಿಗಳನ್ನು ಹೊಂದಿದ ಎಸ್.ಎಂ.ಎಸ್, ವಾಟ್ಸ್‍ಆ್ಯಪ್, ಇ-ಮೇಲ್ ಸಂದೇಶಗಳ ಲಿಂಕ್‍ಗಳನ್ನು ಕ್ಲಿಕ್ ಮಾಡಬಾರದು. ಎಸ್.ಎಂ.ಎಸ್, ವಾಟ್ಸ್‍ಆ್ಯಪ್, ಇ-ಮೇಲ್ ಮುಖಾಂತರ ನಿಮಗೆ ಲಾಟರಿ ಹತ್ತಿದೆ ಎಂದು ಸಂದೇಶಗಳು ಬಂದಾಗ ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಬಾರದು ಎಂದು ಅವರು ಸಲಹೆ ನೀಡಿದರು.
ಎಸ್‍ಬಿಐ ಬೆಂಗಳೂರು ಐಟಿಎಸ್ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ರವಿ ಕುಸಬಿ ಅವರು ಆನ್‍ಲೈನ್ ಅಪರಾಧ ವಿಧಗಳು ಹಾಗೂ ಸೈಬರ್ ಅಪರಾಧಗಳನ್ನು ತಡೆಗಟ್ಟುವ ವಿಧಾನಗಳನ್ನು ಪವರ್ ಪಾಯಿಂಟ್ ಪ್ರೆಜೆಂಟೇಶನ್ ಮೂಲಕ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ವಿವರಿಸಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಯಾದಗಿರಿ ಡಿಎಸ್‍ಪಿ ಯು.ಶರಣಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಿ.ಎ.ಕೃಷ್ಣ ಅವರು ಉಪಸ್ಥಿತರಿದ್ದರು. ಯಾದಗಿರಿ ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ನಿವೃತ್ತ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಯವರು, ಹಿರಿಯ ನಾಗರಿಕರು ಸೇರಿದಂತೆ ಕಾರ್ಯಕ್ರಮದಲ್ಲಿ ಸುಮಾರು 500-600 ಜನ ಭಾಗವಹಿಸಿದ್ದರು.ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೌಲತ್ ಎನ್.ಕೆ. ಅವರು ಸ್ವಾಗತಿಸಿದರು. ಸಂತೋಷ ಜಯಕರ ಅವರು ನಿರೂಪಣೆ ಮಾಡಿದರು. ಗಿರೀಶ್ ಪಾಟೀಲ್ ಅವರು ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...