ಭಾನುವಾರ, ಫೆಬ್ರವರಿ 23, 2020

ಶ್ರೀ ಸಂತಕವಿ ಸರ್ವಜ್ಞ ಜಯಂತ್ಯೋತ್ಸವ
ಸರ್ವಜ್ಞ ಕವಿಯ ಸಂದೇಶ ಅರಿತುಕೊಳ್ಳಿ
-ಶಂಕರಗೌಡ ಎಸ್.ಸೋಮನಾಳ

ಯಾದಗಿರಿ, ಫೆಬ್ರುವರಿ 20 (ಕರ್ನಾಟಕ ವಾರ್ತೆ): ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು ಸಂತ ಕವಿ ಸರ್ವಜ್ಞರು ತ್ರಿಪದಿ ವಚನಗಳ ಮೂಲಕ ತಿದ್ದಿದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ವಚನಗಳ ಸಂದೇಶವನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತಕವಿ ಸರ್ವಜ್ಞ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಂತಕವಿ ಸರ್ವಜ್ಞ ರವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಮಾತನಾಡಿದರು. ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ಮೊದಲು ಪ್ರತಿಯೊಬ್ಬರ ಮನಸ್ಥಿತಿ ಬದಲಾಗಬೇಕು. ಲಿಂಗ, ಜಾತಿ ತಾರತಮ್ಯ ಹೋಗಲಾಡಿಸಿ ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಜನಸಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತ್ರಿಪದಿ ವಚನಗಳನ್ನು ರಚಿಸಿದ್ದಾರೆ. ಅಂತಹ ಪ್ರತಿಯೊಂದು ವಚನಗಳನ್ನು ಮಕ್ಕಳಿಗೆ ಕಲಿಸಬೇಕು. ಜೊತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಅವರು ಸಲಹೆ ನೀಡಿದರು. ಬಾಚವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಬಂಗಾರಪ್ಪ ಕುಂಬಾರ ಯರಗೋಳ ಅವರು ಉಪನ್ಯಾಸ ನೀಡಿ, ಸರ್ವಜ್ಞನು ಗರ್ವದಿಂದ ಕಲಿತವನಲ್ಲ, ಸರ್ವರೊಳು ಒಂದೊಂದು ನುಡಿ ಕಲಿತು ಸರ್ವಜ್ಞನಾದನು. 16ನೇ ಶತಮಾನದಲ್ಲಿ ಸರಳ ಭಾಷೆಯ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಮ್ಮ ತ್ರಿಪದಿಯ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದವರಲ್ಲಿ ಕವಿ ಸರ್ವಜ್ಞ ಒಬ್ಬರಾಗಿದ್ದಾರೆ. ಸರ್ವಜ್ಞ ಎಂಬುವುದು ಸರ್ವವವನ್ನು ತಿಳಿದವರು ಎಂದು ಉತ್ತಂಗಿ ಚನ್ನಪ್ಪನವರ ಬರೆದ ಪುಸ್ತಕದಲ್ಲಿ ಉಲ್ಲೇಖವಿದೆ. ತಂದೆ ಬಸವ ಅರಸ, ತಾಯಿ ಕುಂಬಾರ ಮಾಳಮ್ಮ ಅವರ ಮಗನಾಗಿ ಜನಿಸಿದ ಸರ್ವಜ್ಞ ಹಲವು ತ್ರಿಪದಿಗಳ ಮೂಲಕ ಹೆಸರಾಗಿದ್ದಾರೆ ಎಂದರು.
ಸರ್ವಜ್ಞ ಎಲ್ಲಾ ಸಮಸ್ಯೆಗಳಿಗೂ ವಚನಗಳ ಮೂಲಕ ಉತ್ತರ ನೀಡಿದ್ದಾರೆ. ಅವರ ವಚನಗಳನ್ನು ಪಾಲನೆ ಮಾಡಿದಲ್ಲಿ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಕುಂಬಾರ ಸಮಾಜದವರು ಮುಗ್ದರು. ಯಾರಿಗೂ ಕೇಡು ಬಯಸಿದವರಲ್ಲ. ಎಲ್ಲರೊಂದಿಗೆ ಬೆರೆತು ಬದುಕುವ ಸಮಾಜವಾಗಿದೆ. ಪ್ರಸ್ತುತ ಸಮಾಜದಲ್ಲಿ ಎಲ್ಲವೂ ಡಿಜಿಟಲೀಕರಣವಾಗಿದೆ. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪ್ರತಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಎಂದು ಅವರು ಹೇಳಿದರು. ಸಂತಕವಿಯ ಹಲವಾರು ತ್ರಿಪದಿ ವಚನಗಳು ಇಂದಿಗೂ ಪ್ರಕಾಶಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳಲ್ಲಿ ಸರ್ವಜ್ಞರ ವಚನಗಳು ಪ್ರಥಮದಲ್ಲೇ ಹೇಳುವರು. ಅದರಂತೆ ಕುಂಬಾರ ಸಮಾಜದ ಎಲ್ಲರೂ ಮಕ್ಕಳಿಗೆ ಸಂತಕವಿಯ ವಚನಗಳ ಬಗ್ಗೆ ತಿಳಿಸಬೇಕು ಎಂದರು. ಕುಂಬಾರ ಸಮಾಜದ ಜಿಲ್ಲಾಧ್ಯಕ್ಷರಾದ ದೇವಿಂದ್ರಪ್ಪ ಕುಂಬಾರ ದರ್ಶನಾಪುರ, ಸಮಾಜದ ಜಿಲ್ಲಾ ಗೌರವಾಧ್ಯಕ್ಷರಾದ ಹಣಮಂತಪ್ಪ ಮಿನಾಸ್‍ಪುರ ಅವರು ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ತಂಡದವರು  ನಾಡಗೀತೆ  ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಹೊಸಳ್ಳಿ ಕ್ರಾಸ್‍ನಿಂದ ಜಿಲ್ಲಾಡಳಿತ ಭವನದವರೆಗೆ ಕಲಾತಂಡಗಳೊಂದಿಗೆ ಶ್ರೀ ಸಂತಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...