ಭಾನುವಾರ, ಜನವರಿ 26, 2020

ಅಪರ ಜಿಲ್ಲಾಧಿಕಾರಿ ಸೇರಿ ೧೦ ಜನರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ 

ಯಾದಗಿರಿ, ಜನವರಿ ೨೬ (ಕರ್ನಾಟಕ ವಾರ್ತೆ): ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಭಾವೈಕ್ಯತಾ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೭೧ನೇ ಗಣರಾಜ್ಯೋತ್ಸವದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಸೇರಿದಂತೆ ಅತ್ಯುನ್ನತ ಸೇವೆ/ ಸಾಧನೆಗೈದ ೧೦ ಜನ ಸರ್ಕಾರಿ ನೌಕರರಿಗೆ ಜಿಲ್ಲಾಡಳಿತದಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ ೧೦,೦೦೦ ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಸುನೀಲ್ ನಿಸ್ವಾಸ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಭಗವಂತ ಅನವಾರ, ಅಂಗನವಾಡಿ ಮೇಲ್ವಿಚಾರಕಿ ಅನಿತಾ, ವನದುರ್ಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಬಿರಾದಾರ, ಗ್ರಾಮಲೇಖಾಧಿಕಾರಿ ಇರ್ಫಾನ್, ವಾಹನ ಚಾಲಕ ಅಜಮತ್ ಮಹಮ್ಮದ್ ಅಲಿ, ಪ್ರಥಮ ದರ್ಜೆ ಸಹಾಯಕರಾದ ಶರಣಬಸವ, ಭೀಮಾಶಂಕರ ಹಾಗೂ ಸಿಪಾಯಿ ರಾಯಪ್ಪ ನಾಟೇಕಾರ ಅವರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದರು. ೯ ಜನ ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೯ ಜನ ಸಾಧಕರಾದ ದೊಡ್ಡಬಸಪ್ಪ ಬಳೂರಿಗಿ (ಸಾಹಿತ್ಯ), ಸುಭಾಸ ದೋರನಹಳ್ಳಿ (ಡೋಲಕ್ ವಾದನ), ಹಳ್ಳೇರಾವ್ ಕುಲಕರ್ಣಿ (ಚಿತ್ರಕಲೆ), ಖಾಜಾ ಫರಿದೋದ್ದೀನ್ (ಸಮಾಜ ಸೇವೆ), ರಾಘವೇಂದ್ರ ಕಲಾಲ್ (ಸಮಾಜ ಸೇವೆ- ರಕ್ತದಾನ) ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ತನು ತಂ.ಮಲ್ಲಿಕಾರ್ಜುನ, ನಿಶದ ಬೇಗಂ, ಮಲ್ಲಿಕಾರ್ಜುನ ತಂ.ನರಸಪ್ಪ, ರಾಮು ಯಂಕಪ್ಪ ಅವರನ್ನು ಸನ್ಮಾನಿಸಲಾಯಿತು. ವಿಶೇಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉತ್ತಮ ಪೌರಕಾರ್ಮಿಕ ಮರಿಯಪ್ಪ ತಂದೆ ಮುನಿಯಪ್ಪ ಹಾಗೂ ಮಹತ್ವಾಕಾಂಕ್ಷೆ ಜಿಲ್ಲೆಗೆ ಬಿಡುಗಡೆಯಾದ ೩ ಕೋಟಿ ರೂ. ಅನ್‌ಟೈಡ್ ಫಂಡ್ ಬಳಕೆ ಮಾಡಲು ಸಾರ್ವಜನಿಕರಿಂದ ಪ್ರಸ್ತಾವನೆ ಕೇಳಲಾಗಿ ಅದಕ್ಕೆ ಉತ್ತಮವಾಗಿ ಪ್ರಸ್ತಾವನೆ ಸಲ್ಲಿಸಿದ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಸುನೀಲ್ ಪಾಟೀಲ್ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾದರಿ ಅಂಗನವಾಡಿ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು, ಅರಣ್ಯ ಇಲಾಖೆಯಿಂದ ಗಿಡ-ಮರಗಳ ಬಗ್ಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನೆಗಳ ಕುರಿತು ಸ್ಥಬ್ದ ಚಿತ್ರಗಳ ಆಕರ್ಷಕ ಮೆರವಣಿಗೆ ನಡೆಯಿತು.

ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪ ರೊಟ್ನಡಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ ಮಲ್ಲೇಶಪ್ಪ ಅಚ್ಚೋಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಅವರು ಉಪಸ್ಥಿತರಿದ್ದರು.

ಗಮನ ಸೆಳೆದ ಸಂವಿಧಾನ ಮಹತ್ವ ರೂಪಕ

ಯಾದಗಿರಿ, ಜನವರಿ ೨೬ (ಕರ್ನಾಟಕ ವಾರ್ತೆ): ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೭೧ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕುದುರೆ ಕುಣಿತ ಗಮನ ಸೆಳೆದವು. ಸಭಾ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಪ್ರದರ್ಶಿಸಿದ “ಸಂವಿಧಾನದ ಮಹತ್ವ ಸಾರುವ ರೂಪಕ” ವಿಶೇಷವಾಗಿತ್ತು.
ಸ್ಟೇಷನ್ ಏರಿಯಾದ ಮಹಾತ್ಮ ಗಾಂಧಿ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿಯರು ಪ್ರದರ್ಶಿಸಿದ “ಬಾರಯ್ಯ ಬಾರೋ ನನ್ನ ಸರದಾರ” ಜಾನಪದ ನೃತ್ಯ, ಡಿ.ಡಿ.ಯು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾರಿ ನೃತ್ಯ ಕೂಡ ಗಮನ ಸೆಳೆದವು. ವಿಜಯಪುರದ ಸಂಗಮೇಶ ಮತ್ತು ಶರಣಪ್ಪ ಅವರ ಕುದುರೆ ಕುಣಿತ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...