ಸೋಮವಾರ, ಜನವರಿ 27, 2020

ಫೆ.೩ರಿಂದ ತಿಂಥಣಿ ಮೌನೇಶ್ವರ ಜಾತ್ರೆ
ಯಾದಗಿರಿ, ಜನವರಿ ೨೭ (ಕರ್ನಾಟಕ ವಾರ್ತೆ): ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮದ ಜಗದ್ಗುರು ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವ ಫೆಬ್ರುವರಿ ೩ರಿಂದ ೮ರವರೆಗೆ ನಡೆಯಲಿದೆ. ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಫೆಬ್ರುವರಿ ೩ರಂದು ದಶಮಿ ಆಚರಣೆ ಅಂಗವಾಗಿ ಸುರಪುರದಿಂದ ತಿಂಥಣಿಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಫೆ.೪ರಂದು ಏಕಾದಶಿ ಆಚರಣೆ ಇದ್ದು, ಸಾಯಂಕಾಲ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಫೆ.೫ರಂದು ದ್ವಾದಶಿ ಪಲ್ಲಕ್ಕಿ ಪ್ರಥಮ ಸೇವಾ ನಡೆಯಲಿದೆ. ಫೆ.೬ರಂದು ತ್ರಯೋದಶಿ ಧಾರ್ಮಿಕ ಕಾರ್ಯಕ್ರಮಗಳು ಜಾವಳ, ಸಾಮೂಹಿಕ ಉಪನಯನಗಳು ನಡೆಯಲಿದ್ದು, ರಾತ್ರಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆ.೭ರಂದು ಚತುದರ್ಶಿ ಸಾಯಂಕಾಲ ೫ ಗಂಟೆಗೆ ರಥೋತ್ಸವ, ಪಲ್ಲಕ್ಕಿಯ ಮಹಾಸೇವಾ ನಡೆಯಲಿದೆ. ಫೆ.೮ರಂದು ಭಾರತ ಹುಣ್ಣಿಮೆ ಆಚರಣೆ ಧೂಳಗಾಯಿ, ಸಾಯಂಕಾಲ ಗುಹಾ ಪ್ರವೇಶ ಕಾರ್ಯಕ್ರಮಗಳು ಜರುಗಲಿವೆ.

ಹೆಚ್೧ಎನ್೧ ಜ್ವರ: ಮುಂಜಾಗ್ರತೆಗೆ ಮನವಿ
ಯಾದಗಿರಿ, ಜನವರಿ ೨೭ (ಕರ್ನಾಟಕ ವಾರ್ತೆ): ತೀವ್ರ ಸ್ವರೂಪದ ಜ್ವರ, ಅತೀ ಭೇದಿ/ವಾಂತಿ, ಅತಿಯಾದ ಮೈ-ಕೈ ಮತ್ತು ತಲೆ ನೋವು, ಕೆಮ್ಮು ಮತ್ತು ಹಳದಿ ಕಫ, ನೆಗಡಿ ಮತ್ತು ಗಂಟಲು ಕೆರೆತ, ಉಸಿರಾಟದ ತೊಂದರೆ ಹೆಚ್೧ಎನ್೧ ರೋಗದ ಲಕ್ಷಣಗಳಾಗಿವೆ. ಹೆಚ್೧ಎನ್೧ ರೋಗದ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು: ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತç ಅಥವಾ ಟಿಶ್ಯೂ ಕಾಗದದಿಂದ ಮುಚ್ಚಿಕೊಳ್ಳಬೇಕು. ಮೂಗು, ಕಣ್ಣು ಅಥವಾ ಬಾಯಿಯನ್ನು ಮುಟ್ಟುವ ಮೊದಲು ಮತ್ತು ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಚೆನ್ನಾಗಿ ನಿದ್ದೆ ಮಾಡಬೇಕು. ದೈಹಿಕವಾಗಿ ಚಟುವಟಿಕೆಯಿಂದಿರಬೇಕು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಧಾರಾಳವಾಗಿ ನೀರು/ದ್ರವ ಪದಾರ್ಥಗಳನ್ನು ಕುಡಿಯುವ ಜೊತೆಗೆ ಪೌಷ್ಟಿಕಾಂಶವಿರುವ ಆಹಾರ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜನಸಂದಣಿಯಿರುವ ಸ್ಥಳಗಳಿಗೆ ಹೋದಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಉದಾಹರಣೆಗೆ ರೋಗ ಲಕ್ಷಣವಿರುವ ವ್ಯಕ್ತಿಗಳಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಏನು ಮಾಡಬಾರದು: ಹಸ್ತಲಾಘವ, ಆಲಿಂಗನ ಮಾಡಬಾರದು. ವೈದ್ಯರ ಸಲಹೆ ಇಲ್ಲದೆ ಔಷಧಿಯನ್ನು ತೆಗೆದುಕೊಳ್ಳಬಾರದು. ರಸ್ತೆ ಅಥವಾ ಎಲ್ಲೆಂದರಲ್ಲಿ ಉಗಳಬಾರದು. ಅನಾವಶ್ಯಕವಾಗಿ ಜನಸಂದಣಿ ಪ್ರದೇಶಗಳಿಗೆ ಭೇಟಿ ನೀಡಬಾರದು ಹಾಗೂ ಪ್ರಯಾಣಿಸಬಾರದು. ಫ್ಲೂ ತರಹದ ಚಿಹ್ನೆಗಳಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದು ಅವರು ತಿಳಿಸಿದ್ದಾರೆ.

ಫೆ.೨೩ರಂದು ಪ್ರಬಂಧ, ಚಿತ್ರಕಲೆ ಸ್ಪರ್ಧೆ
ಯಾದಗಿರಿ, ಜನವರಿ ೨೭ (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ ಕಲಬುರಗಿ, ಜಿಲ್ಲಾ ಕೈಗಾರಿಕಾ ಕೇಂದ್ರ ಯಾದಗಿರಿ ಮತ್ತು ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಫೆಬ್ರುವರಿ ೨೩ರಂದು ಯಾದಗಿರಿ ನಗರದ ಚಿತ್ತಾಪುರ ರಸ್ತೆ ಮಾರ್ಗದಲ್ಲಿರುವ ಆರ್.ವಿ.ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ೯ನೇ, ೧೦ನೇ, ಪಿ.ಯು.ಸಿ. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಬಹುದು. ಅಂದು ಬೆಳಿಗ್ಗೆ ೧೧ರಿಂದ ೧೨.೩೦ ಗಂಟೆಯವರೆಗೆ ಪ್ರಬಂಧ ಬರೆಯುವ ಸ್ಪರ್ಧೆ ಹಾಗೂ ಮಧ್ಯಾಹ್ನ ೧ರಿಂದ ೨.೩೦ರ ವರೆಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. “ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ" (Role of Small Scale Industries in the Development of Indian Economy) ಸ್ಪರ್ಧೆಯ ವಿಷಯವಾಗಿರುತ್ತದೆ. ಯಾದಗಿರಿ ಜಿಲ್ಲೆಯ ಸಾಂಪ್ರದಾಯಿಕ ಕಲೆಯ ಬಗ್ಗೆ ಚಿತ್ರಕಲೆ ಅಥವಾ ಪೇಂಟಿAಗ್ ಇತ್ಯಾದಿ ಸ್ಪರ್ಧೆಯಾಗಿರುತ್ತದೆ. ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬಂಧ ಬರೆಯಬಹುದು. ಎರಡು ವಿಭಾಗಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಒಂದೇ ದಿನ ಏರ್ಪಡಿಸಲಾಗುತ್ತದೆ. ಎರಡು ಸ್ಪರ್ಧೆಗಳ ವಿಜೇತರಿಗೆ ಪ್ರಥಮ ಬಹುಮಾನವಾಗಿ ೧೦,೦೦೦, ದ್ವಿತೀಯ ಬಹುಮಾನ ೭,೫೦೦ ಹಾಗೂ ತೃತೀಯ ಬಹುಮಾನ ೫,೦೦೦ ರೂ.ಗಳು ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತದೆ. ಈ ವಿಷಯಕ್ಕೆ ಸಂಬAಧಿಸಿದAತೆ ಮತ್ತು ನಿಗದಿತ ಅರ್ಜಿಗಳಿಗಾಗಿ ಸೂಕ್ಷ್ಮ, ಸಣ್ಣ ಮತ್ತು  ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ ಕಲಬುರಗಿ ಅಥವಾ ಜಿಲ್ಲಾ ಕೈಗಾರಿಕಾ ಕೇಂದ್ರ ಯಾದಗಿರಿ ಮೊ:೯೬೮೬೦೬೦೮೦೩ ಅಥವಾ ೯೯೪೫೨೦೮೪೨೬ ಸಂಪರ್ಕಿಸಬಹುದಾಗಿದೆ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ ಕಲಬುರಗಿ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...