ಗುರುವಾರ, ಜನವರಿ 9, 2020

ಜ.೧೫ರಂದು ಬಲಭೀಮೇಶ್ವರ ಜಾತ್ರೆ
ಯಾದಗಿರಿ, ಜನವರಿ ೧೦ (ಕರ್ನಾಟಕ ವಾರ್ತೆ): ಶಹಾಪುರ ತಾಲ್ಲೂಕಿನ ಭಿಮರಾಯನಗುಡಿ ಗ್ರಾಮದ ಶ್ರೀ ಬಲಭೀಮೇಶ್ವರ ಜಾತ್ರೆ ಉತ್ಸವ ಜನವರಿ ೧೫ರಂದು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಬಲಭೀಮೇಶ್ವರ ದೇವಸ್ಥಾನ ಸಮಿತಿ ಕಾರ್ಯದರ್ಶಿಗಳಾದ ಶಹಾಪುರ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಶ್ರೀ ಸದ್ಗುರು ಸಂಗಮೇಶ್ವರ ಹಾಗೂ ಬಲಭೀಮೇಶ್ವರ ಪಲ್ಲಕ್ಕಿಯು ಭೀಮರಾಯನಗುಡಿಯಿಂದ ಶಹಾಪುರ ನಗರದ ಮಾರ್ಗವಾಗಿ ಬೆಳಿಗ್ಗೆ ೭.೩೦ಕ್ಕೆ ಹೊರಟು ಹುರಸಗುಂಡಗಿ ಗ್ರಾಮದ ಬದಿಯಲ್ಲಿರುವ ಭೀಮಾ ನದಿಯನ್ನು ಮಧ್ಯಾಹ್ನ ೧ ಗಂಟೆಗೆ ತಲುಪಲಿದೆ. ಗಂಗಾಸ್ನಾನ ಹಾಗೂ ಮಹಾಪೂಜೆಗೈದು ಭಕ್ತಾದಿಗಳು ಮಹಾ ಪ್ರಸಾದ ಸ್ವೀಕರಿಸಿದ ನಂತರ ಹುರಸಗುಂಡಗಿ ಮತ್ತು ಮಡ್ನಾಳ ಮಾರ್ಗವಾಗಿ ಸಂಜೆ ೫ ಗಂಟೆಗೆ ಹಳಿಸಗರ ಗ್ರಾಮದ ಶ್ರೀ ಹನುಮಾನ ದೇವಸ್ಥಾನಕ್ಕೆ ತಲುಪಲಿದೆ. ಅಲ್ಲಿ ಭಕ್ತಾದಿಗಳೆಲ್ಲರೂ ದರ್ಶನ ಪಡೆದ ನಂತರ ಸುಮಾರು ರಾತ್ರಿ ೮ ಗಂಟೆ ಸಮಯಕ್ಕೆ ಪಲ್ಲಕ್ಕಿಯೊಂದಿಗೆ ಸಗರನಾಡಿನ ಶಹಾಪುರ ನಗರದಲ್ಲಿ ಆಗಮಿಸಿ ಮೆರವಣಿಗೆ ಉತ್ಸವ ಜರುಗಿ ಜನವರಿ ೧೬ರಂದು ಬೆಳಿಗ್ಗೆ ೫ ಗಂಟೆಗೆ ಪಲ್ಲಕ್ಕಿಯು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲಿದೆ ಅವರು ತಿಳಿಸಿದ್ದಾರೆ.
ಜ.೧೮ರಂದು ಶಿಕ್ಷಕರ ಸ್ಥಳ ನಿಯುಕ್ತಿಗೆ ಕೌನ್ಸಿಲಿಂಗ್
ಯಾದಗಿರಿ, ಜನವರಿ ೧೦ (ಕರ್ನಾಟಕ ವಾರ್ತೆ): ೨೦೧೮-೧೯ನೇ ಸಾಲಿನಲ್ಲಿ ಸರಕಾರಿ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ೩೧ರಂದು ಪ್ರಕಟಿಸಲಾದ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಪರೀಕ್ಷೆ೧ ಮತ್ತು ಪರೀಕ್ಷೆ-೨ರ ಎಲ್ಲಾ ವಿಷಯದ ಅರ್ಹ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಕೌನ್ಸಿಲಿಂಗ್‌ನ್ನು ಜನವರಿ ೧೮ರಂದು ಬೆಳಿಗ್ಗೆ ೧೧ ಗಂಟೆಗೆ ಯಾದಗಿರಿ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ನಿಗದಿಪಡಿಸಲಾಗಿದೆ.
ಈಗಾಗಲೇ ಮೂಲ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಈ ಕಚೇರಿಯಿಂದ ನೀಡಿದ ಸ್ವೀಕೃತಿ ಪತ್ರದೊಂದಿಗೆ ಕೌನ್ಸಲಿಂಗ್‌ಗೆ ಹಾಜರಾಗಬೇಕು. ಇಲ್ಲಿಯವರೆಗೆ ಮೂಲ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಇರುವ ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ಅರ್ಜಿಯಲ್ಲಿ ಕ್ಲೇಮ್ ಮಾಡಿರುವ ಸ್ಥಳೀಯ ಅಭ್ಯರ್ಥಿಯ ಅರ್ಹತಾ ಪ್ರಮಾಣ ಪತ್ರ ನೇರ ಹಾಗೂ ಸಮತಳ ಮೀಸಲಾತಿ ಗುಂಪಿನ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂ:೦೮೪೭೩-೨೫೦೯೧೩ ಸಂಪರ್ಕಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.೨೦ರಂದು ಗುರುಮಠಕಲ್ ಕ್ಷೇತ್ರದ ಕೆಡಿಪಿ ಸಭೆ
ಯಾದಗಿರಿ, ಜನವರಿ ೧೦ (ಕರ್ನಾಟಕ ವಾರ್ತೆ): ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ನಾಗನಗೌಡ ಕಂದಕೂರ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜನವರಿ ೨೦ರಂದು ಬೆಳಿಗ್ಗೆ ೧೧ ಗಂಟೆಗೆ ಗುರುಮಠಕಲ್ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ತಿ ತೆರಿಗೆ ಹೆಚ್ಚಳ: ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ
ಯಾದಗಿರಿ, ಜನವರಿ ೧೦ (ಕರ್ನಾಟಕ ವಾರ್ತೆ): ೨೦೨೦-೨೧ನೇ ಸಾಲಿನಿಂದ ೨೦೨೨-೨೩ ನೇ ಸಾಲಿನವರೆಗೆ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಸದ ಕಟ್ಟಡಗಳಿಗೆ ಶೇ.೨೦ ರಂತೆ ಹಾಗೂ ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಉಪಯೋಗದ ಕಟ್ಟಡಗಳಿಗೆ ಹಾಗೂ ಖಾಲಿ ನಿವೇಶನಗಳಿಗೆ ಶೇ.೩೦ ರಂತೆ ಆಸ್ತಿ ತೆರಿಗೆಯನ್ನು ನಗರಸಭೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನವರಿ ೪ರಂದು ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ರ ಕಲಂ ೧೦೨ಎ ರೀತ್ಯ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಶೇ.೧೫ರಿಂದ ಶೇ.೩೦ರವರೆಗೆ ಹೆಚ್ಚಿಸಬೇಕಾಗಿರುತ್ತದೆ. ಅದರಂತೆ ೨೦೨೦-೨೧ನೇ ಸಾಲಿನಿಂದ ೨೦೨೨-೨೩ನೇ ಸಾಲಿನ ವರೆಗೆ ಹೆಚ್ಚಿಸಿದ ಆಸ್ತಿ ತೆರಿಗೆಯನ್ನು ಮುಂಬರುವ ಏಪ್ರಿಲ್ ೧ರಿಂದ ಜಾರಿಗೆ ಬರಲಿದೆ. ಆಸ್ತಿ ತೆರಿಗೆಯ ಹೆಚ್ಚಳ ಬಗ್ಗೆ ಈ ಪ್ರಕಟಣೆ ದಿನಾಂಕದಿAದ ೩೦ ದಿನಗಳ ಒಳಗಾಗಿ ಸಾರ್ವಜನಿಕರು ಅಥವಾ ಸಂಘ-ಸAಸ್ಥೆಗಳು ತಮ್ಮ ಸಲಹೆ ಅಥವಾ ಆಕ್ಷೇಪಣೆಗಳನ್ನು ಸಮರ್ಪಕವಾದ ಕಾರಣ ಹಾಗೂ ಅದನ್ನು ಪ್ರದಿಪಾದಿಸಲು ಸೂಕ್ತ ದಾಖಲಾತಿಗಳೊಂದಿಗೆ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಲು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...