ಬುಧವಾರ, ಜನವರಿ 8, 2020

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಹಂಚಿಕೆ ರದ್ದು
ಇ-ಕೆವೈಸಿ ದೃಢೀಕರಣಕ್ಕೆ ಮಾರ್ಚ್ 31ರವರೆಗೆ ಅವಕಾಶ
-ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಜನವರಿ 08 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಎಲ್ಲಾ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಹಾಜರಾಗಿ ಕಡ್ಡಾಯವಾಗಿ ಆಧಾರ್ ದೃಢೀಕರಣ (ಇ-ಕೆವೈಸಿ)ವನ್ನು ಮಾಡಿಸಲು ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ. ಇ-ಕೆವೈಸಿ ಮಾಡದೆ ಇರುವ ಫಲಾನುಭವಿಗಳಿಗೆ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 29,216 ಅಂತ್ಯೋದಯ ಪಡಿತರ ಚೀಟಿಯ 1,17,597 ಸದಸ್ಯರು ಹಾಗೂ 2,29,109 ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿಯ 8,13,373 ಸದಸ್ಯರು ಸೇರಿ ಒಟ್ಟು 9,30,970 ಫಲಾನುಭವಿಗಳಿದ್ದು, ಶೇ.100ರಷ್ಟು ಆಧಾರ್ ಅನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಪ್ರತಿ ಪಡಿತರ ಚೀಟಿಗಳನ್ನು ಪರಿಶೀಲಿಸಿ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸಲು ಹಾಗೂ ಅರ್ಹ ಪಡಿತರ ಚೀಟಿದಾರರನ್ನು ಗುರುತಿಸಿ ಪಡಿತರ ಚೀಟಿಯನ್ನು ನೀಡಲು ತಿಳಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 29,216 ಅಂತ್ಯೋದಯ ಪಡಿತರ ಚೀಟಿಯಲ್ಲಿ 8,363 ಪಡಿತರ ಚೀಟಿಯ 57,510 ಸದಸ್ಯರು ಹಾಗೂ 2,29,109 ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿಯಲ್ಲಿ 1,10,656 ಪಡಿತರ ಚೀಟಿಯ 5,13,361 ಸದಸ್ಯರ ಇ-ಕೆವೈಸಿ ಪಡೆದಿದ್ದು, ಮತ್ತೊಮ್ಮೆ ಇವರ ಇ-ಕೆವೈಸಿ ಸಂಗ್ರಹಿಸುವ ಅವಶ್ಯಕತೆ ಇರುವುದಿಲ್ಲ.
ಜಿಲ್ಲೆಯ ಎಲ್ಲಾ ಫಲಾನುಭವಿಗಳ ಮಾಹಿತಿಯೊಂದಿಗೆ ಆಧಾರ್ ಜೋಡಣೆಯಾಗಿರುವುದರಿಂದ ಚಾಲ್ತಿಯಲ್ಲಿರದ, ಕುಟುಂಬದೊಂದಿಗೆ ವಾಸವಿಲ್ಲದ, ಮೃತರಾದ ಫಲಾನುಭವಿಗಳ ಮಾಹಿತಿಗಳನ್ನು ಗುರುತಿಸಿ ಅಂತಹ ಫಲನುಭವಿಗಳ ಮಾಹಿತಿಗಳನ್ನು ಆಹಾರ ದತ್ತಾಂಶದಿಂದ ಕಡಿತಗೊಳಿಸಿ ಪಡಿತರ ದಾಸ್ತಾನು ಉಳಿಕೆಯಾಗಲು ಕ್ರಮವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎನ್.ಐ.ಸಿ ರವರು ಈಗಾಗಲೇ ಸಿದ್ಧಪಡಿಸಿರುವ ತಂತ್ರಾಂಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ನ್ಯಾಯಬೆಲೆ ಅಂಗಡಿ ಹಂತದಲ್ಲಿ ಮಾತ್ರ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಾತಿ ಪ್ರಮಾಣಪತ್ರ ಸಲ್ಲಿಸಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಡಿತರ ಚೀಟಿಯ ಫಲಾನುಭವಿಗಳು ತಮ್ಮ ಪಡಿತರ ಚೀಟಿಯ ಯಾವುದಾದರೂ ಒಬ್ಬ ಸದಸ್ಯರ ಜಾತಿ ಪ್ರಮಾಣ ಪತ್ರವನ್ನು ಇ-ಕೆವೈಸಿ ಮಾಡುವ ಸಂದರ್ಭದಲ್ಲಿ ಮಾಹಿತಿ ನೀಡಬೇಕು. ಅನಿಲ ಸಂಪರ್ಕ ಹೊಂದಿದರೆ, ಅಂತಹ ಪಡಿತರ ಚೀಟಿದಾರರ ಯಾವ ಯೋಜನೆಯ ಫಲಾನುಭವಿಗಳು ಅಥವಾ ನೇರವಾಗಿ ಖರೀದಿ ಮಾಡಿರುವ ಕುರಿತು ಮಾಹಿತಿ ನೀಡಲು ಸೂಚಿಸಲಾಗಿದೆ.
ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಫಲಾನುಭವಿಯ ಇ-ಕೆವೈಸಿ ಮಾಡುವ ಸಲುವಾಗಿ ಪ್ರತಿ ಫಲಾನುಭವಿಗೆ 5 ರೂ.ನಂತೆ ಒಂದು ಕುಟುಂಬಕ್ಕೆ ಗರಿಷ್ಠ ಮೊತ್ತ 20 ರೂ. ಮಾತ್ರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ನೇರವಾಗಿ ಅಂಗಡಿಯವರಿಗೆ ಪಾವತಿಸಲಾಗುತ್ತದೆ. ಫಲಾನುಭವಿಯಿಂದ ಯಾವುದೇ ಮೊತ್ತವನ್ನು ನ್ಯಾಯಬೆಲೆ ಅಂಗಡಿಯವರು ಸಂಗ್ರಹಿಸದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಒಂದು ವೇಳೆ ಪಡಿತರ ಚೀಟಿದಾರರಿಂದ ಹಣ ಪಡೆದ ಬಗ್ಗೆ ದೂರುಗಳು ಬಂದರೆ ಅಂತಹ ನ್ಯಾಯಬೆಲೆ ಅಂಗಡಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪಡಿತರ ಚೀಟಿದಾರರ ಆಧಾರ್ ದೃಢೀಕರಣ (ಇ-ಕೆವೈಸಿ)ವನ್ನು ಪಡೆಯುವ ಸಂದರ್ಭದಲ್ಲಿ ಯಾವುದಾದರು ಸಮಸ್ಯೆಗಳು ಮತ್ತು ದೂರುಗಳು ಇದ್ದರೆ ದೂರವಾಣಿ ಸಂಖ್ಯೆ:08473-253707 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...