ಮಂಗಳವಾರ, ಡಿಸೆಂಬರ್ 24, 2019

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಕಾನೂನು ಜಾಗೃತಿ
ಅಪರಿಚಿತ ಮೊಬೈಲ್ ಕರೆ, ಸಂದೇಶಗಳ ಬಗ್ಗೆ ಎಚ್ಚರವಿರಲಿ
-ನ್ಯಾಯಾಧೀಶರಾದ ನಾಮದೇವ ಕೆ. ಸಾಲಮಂಟಪಿ
ಯಾದಗಿರಿ, ಡಿಸೆಂಬರ್ ೨೪ (ಕರ್ನಾಟಕ ವಾರ್ತೆ): ಮೊಬೈಲ್ ಕರೆ, ಚಾಟಿಂಗ್, ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಳ್ಳುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಮಹಿಳೆಯರು ಎಚ್ಚರವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಗೌರವಾನ್ವಿತ ಶ್ರೀ ನಾಮದೇವ ಕೆ.ಸಾಲಮಂಟ ಅವರು ಹೇಳಿದರು.
ನಗರದ ಲಿಂಗೇರಿ ಕೋನಪ್ಪ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಅವಶ್ಯವಿದೆ. ಆದರೆ, ವಿದ್ಯಾಭ್ಯಾಸಕ್ಕೆ ಬೇಕಾಗುವ ಮಾಹಿತಿಯನ್ನು ಮಾತ್ರ ಪಡೆಯಬೇಕು. ಇದರಿಂದ ಸ್ತಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವಲ್ಲಿ ಒಂದು ಪ್ರಯತ್ನವಾಗುತ್ತದೆ. ತಾಯಿಯೇ ಮೊದಲು ಗುರು. ಹಾಗಾಗಿ, ಮಕ್ಕಳು ತಾಯಿಯ ಜೊತೆಗೆ ಯಾವುದೇ ವಿಷಯವನ್ನು ಮುಕ್ತವಾಗಿ ಹಂಚಿಕೊಳ್ಳುವುದರಿAದ ಪರಿಹಾರ ಸಿಗುತ್ತದೆ. ಮಕ್ಕಳು ಯಾವುದೇ ಘಟನೆ ಸಂಭವಿಸಿದರೂ ಮೊದಲು ಪೋಷಕರಿಗೆ ತಿಳಿಸಬೇಕು. ಪೋಷಕರೊಂದಿಗೆ ಮಾಹಿತಿ ಹಂಚಿಕೊಳ್ಳುವುದರಿ0ದ ಪರೋಕ್ಷವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡ0ತಾಗುತ್ತದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ೧೮ ವರ್ಷದೊಳಗಿನ ಮಕ್ಕಳ ಮೇಲೆ ಶಿಕ್ಷಕರು, ಶಾಲಾ ಮುಖ್ಯಸ್ಥರು, ಸಿಬ್ಬಂದಿಗಳು, ವಾಹನ ಚಾಲಕರು, ಸಾರ್ವಜನಿಕರಿಂದ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ದೌರ್ಜನ್ಯಕ್ಕೊಳಗಾದ ಮಕ್ಕಳು ಯಾವುದೇ ಸಂಕೋಚವಿಲ್ಲದೆ ಪೊಲೀಸ್ ಇಲಾಖೆ, ಸಂಬ0ಧಿಸಿದ ಇಲಾಖೆಗೆ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅರ್ಜುನ ಬನಸೊಡೆ ಅವರು ಮಾತನಾಡಿ, ದೇಶದಲ್ಲಿ ಕಠಿಣವಾದ ಶಿಕ್ಷೆಗಳಿದ್ದರೂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅಹಿತಕರ ಘಟನೆ ಸಂಭವಿಸಿದರೆ ತಕ್ಷಣ ಮಕ್ಕಳ ಸಹಾಯವಾಣಿ-೧೦೯೮ ಅಥವಾ ೧೦೦ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ಹೇಳಿದರು.
೨೦೦೫ರ ಮಹಿಳಾ ಕುಟುಂಬ ದೌರ್ಜನ್ಯ ಕಾಯ್ದೆಯಡಿ ಮಹಿಳೆಯು ಗಂಡನಿ0ದ ರಕ್ಷಣೆ, ಜೀವನಾಂಶ ಪಡೆಯುವ ಹಕ್ಕು ಹೊಂದಿರುತ್ತಾಳೆ. ಕುಟುಂಬದಲ್ಲಿ ಮಹಿಳೆಗೆ ಹಿಂಸೆ ನೀಡಿದರೆ ಕಲಂ ೩೫ರಡಿ ೨ ವರ್ಷ ಜೈಲು, ೨೦ ಸಾವಿರ ರೂ. ದಂಡ ವಿಧಿಸಲಾಗುತ್ತದೆ. ೨೦೧೨ರ ಫೋಕ್ಸೋ ಕಾಯ್ದೆಯು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವಲ್ಲಿ ಪ್ರಮುಖವಾಗಿದೆ. ಇದರಡಿ ಅಪರಾಧಿಗೆ ಜೀವಾವಧಿ ಶಿಕ್ಷೆ, ಮರಣದಂಡನೆ ನೀಡುವ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.
ಲಿಂಗ ತಾರತಮ್ಯವಿಲ್ಲದೆ ಹೆಣ್ಣುಮಗು ತಂದೆ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕು ಇದೆ. ವರದಕ್ಷಿಣೆ ಪಡೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಪ್ರತಿಯೊಬ್ಬರು ಕಾನೂನು ಬಗ್ಗೆ ತಿಳಿವಳಿಕೆ ಹಾಗೂ ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯವಿದೆ ಎಂದು ಅವರು ತಿಳಿಸಿದರು.
ವಕೀಲರಾದ ಆರ್.ಎಸ್ ಪಾಟೀಲ್ ಅವರು ಮಾತನಾಡಿ, ಲೈಂಗಿಕ ದೌರ್ಜನ್ಯ ಅಪರಾಧ ಕೃತ್ಯವಾಗಿದೆ. ೨೦೧೨ರಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆ ಕಾಯ್ದೆಯನ್ನು ತಂದು ಮಕ್ಕಳ ಮೇಲೆ ನಡೆಯುವ ಯಾವುದೇ ದೌರ್ಜನ್ಯವನ್ನು ಐಪಿಸಿ ೩೭೫ರಡಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ಮತ್ತು ಅದಕ್ಕೆ ಬಾಹ್ಯವಾಗಿ ಪ್ರಚೋದಿತ ವ್ಯಕ್ತಿಯನ್ನು ಸಹ ಮರಣ ದಂಡನೆಗೆ ಗುರಿಪಡಿಸಬಹುದು ಎಂದು ಹೇಳಿದರು.
ನಗ್ನ ದೇಹದ ಪ್ರದರ್ಶನ, ಅಶ್ಲೀಲ ಚಿತ್ರ, ವೀಡಿಯೊ, ಪೋಸ್ಟರ್ ತೋರಿಸುವ ಮೂಲಕ ಮಗುವಿನ ಮೇಲೆ ಯಾವುದೇ ರೀತಿಯ ದೌರ್ಜನ್ಯ ಎಸಗಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ದೌರ್ಜನ್ಯಕ್ಕೊಳ್ಳಗಾದ ಸಂತ್ರಸ್ತೆಗೆ ಸಮಾಜಮುಖಿಯಾಗಿ ಬದುಕಲು ಪರಿಹಾರವಾಗಿ ೫ ಲಕ್ಷ ರೂ. ವರೆಗೆ ಹಣಕಾಸಿನ ನೆರವು ನೀಡಲಾಗುವುದು. ದೌರ್ಜನ್ಯಕ್ಕೊಳಗಾದ ಮಗುವಿನ ವೈದ್ಯಕೀಯ ಪರೀಕ್ಷೆಯನ್ನು ಮಗುವಿನ ಇಚ್ಛೆಯ ಮೇರೆಗೆ ಮಗುವಿನ ಪೋಷಕರ ಎದುರು ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಲಿಂಗೇರಿ ಕೋನಪ್ಪ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಜಿ.ಎಮ್.ವಿಶ್ವಕರ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ನಾಗಯ್ಯ ಗುತ್ತೆದಾರ್, ಕಾರ್ಯದರ್ಶಿಗಳಾದ ವಿನಯಕುಮಾರ ಕುಲಕರ್ಣಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಗೀತಾ ಪ್ರಾರ್ಥನಾ ಗೀತೆ ಹಾಡಿದರು. ಉಪನ್ಯಾಸಕರಾದ ಸತೀಶಕುಮಾರ ಹವಾಲ್ದಾರ್ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...