ಗುರುವಾರ, ಡಿಸೆಂಬರ್ 12, 2019

ಯುವ ಸ್ಪಂದನ ಅರಿವು ಕಾರ್ಯಕ್ರಮ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ “ಯುವ ಸ್ಪಂದನ ಅರಿವು ಕಾರ್ಯಕ್ರಮ”ವನ್ನು ಶಹಾಪುರ ತಾಲ್ಲೂಕಿನ ಎಸ್‌ಎಂಸಿ ಜೈನ್ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ನಡೆಸಲಾಯಿತು. ಯುವ ಪರಿವರ್ತಕರಾದ ಜಯಶ್ರೀ ರಾಠೋಡ ಅವರು ಮಾತನಾಡಿ, ಯುವ ಜನಾಂಗವು ದೇಶದ ಹಾಗೂ ರಾಜ್ಯದ ಜನಸಂಖ್ಯೆಯಲ್ಲಿ ಮೂರನೆಯ ಒಂದು ಭಾಗದಷ್ಟಿದೆ. ಇಂದಿನ ಯುವಕರೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ಅರೋಗ್ಯವಂತ ಮನಸ್ಥಿತಿಯನ್ನು ಬೆಳೆಸುವುದು ಯುವ ಜನತೆಯಲ್ಲಿ ಧನಾತ್ಮಕ ಶಕ್ತಿಯ ವೃದ್ಧಿಯನ್ನು ಖಾತರಿ ಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಜನರು ಹಲವಾರು ಒತ್ತಡಗಳಿಗೆ ಒಳಗಾಗುತ್ತಾರೆ. ಜಾಗತೀಕರಣ, ತಂತ್ರಜ್ಞಾನದ ಪ್ರಗತಿ ಮತ್ತು ಕ್ಷಿಪ್ರ ಸಾಂಸ್ಕೃತಿಕ ಮಿಶ್ರಣದಿಂದಾಗಿ ಯುವಜನರ ಬೇಡಿಕೆ ಮತ್ತು ಅವರ ತೊಂದರೆಗಳನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಲಾಗುತ್ತಿಲ್ಲ. ಈ ಎಲ್ಲಾ ಬದಲಾವಣೆಗಳಿಗೆ ಪರಿಣತಿ ಮತ್ತು ಅನುಭವದ ಕೊರತೆಯಿಂದಾಗಿ ಸಮಾಜ ಮತ್ತು ಕುಟುಂಬದಲ್ಲಿ ಯುವಜನರಿಗೆ ಸಹಾಯ ಸಿಗುತ್ತಿಲ್ಲ. ಇದು ಸೂಕ್ತವಲ್ಲದ ಜೀವನದ ಆಯ್ಕೆಗಳು ಮತ್ತು ದುಷ್ಪರಿಣಾಮಗಳಿಗೆ ಯುವಜನರನ್ನು ದೂಡುತ್ತದೆ. ಈ ಹಿನ್ನೆಲೆಯಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಕರ್ನಾಟಕ ಸರ್ಕಾರವು ಯುವಜನ ಪರ ಕಾರ್ಯಕ್ರಮಗಳನ್ನು ಯುವ ಸ್ಪಂದನ ಎಂಬ ಹೆಸರಿನಲ್ಲಿ ಆರಂಭಿಸಿದೆ. ಈ ಕಾರ್ಯಕ್ರಮವನ್ನು ನಿಮ್ಹಾನ್ಸ್ ಎಪಿಡೆಮಿಯಾಲಜಿ ವಿಭಾಗದ ಜನ ಅರೋಗ್ಯ ಕೇಂದ್ರದ ಜೊತೆಗೂಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಾರಂಭಿಸಿತು. ಯುವ ಸ್ಪಂದನ ಕೇಂದ್ರದಲ್ಲಿ ಎಲ್ಲಾ ಸೇವೆ ಮತ್ತು ಮಾರ್ಗದರ್ಶನ ಸೇವೆಗಳು ಉಚಿತವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾದ ಚನ್ನಬಸಪ್ಪ ಕುಳಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...