ಸೋಮವಾರ, ನವೆಂಬರ್ 25, 2019

ರೋಗ ಪತ್ತೆಗೆ ಮನೆಮನೆಗೆ ಭೇಟಿ ನೀಡಲಿರುವ ಆಶಾ ಮತ್ತು ಪುರುಷ ವಾಲೆಂಟೀರ್
ಕುಷ್ಠ, ಕ್ಷಯರೋಗ ಪತ್ತೆಗೆ ಸಾರ್ವಜನಿಕರ ಸಹಕಾರ ಅಗತ್ಯ
-ಸಿಇಓ ಶಿಲ್ಪಾ ಶರ್ಮಾ
ಯಾದಗಿರಿ, ನವೆಂಬರ್ ೨೫ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಕುಷ್ಠರೋಗ ಮತ್ತು ಕ್ಷಯರೋಗ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಆಂದೋಲನವನ್ನು ನವೆಂಬರ್ ೨೫ರಿಂದ ಡಿಸೆಂಬರ್ ೧೦ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಆಂದೋಲನದಲ್ಲಿ ಆಶಾ ಕಾರ್ಯಕರ್ತೆ ಮತ್ತು ಪುರುಷ ವಾಲೆಂಟೀರ್ ಮನೆಮನೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ರೋಗ ಪತ್ತೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಮನವಿ ಮಾಡಿದರು.
ನಗರದ ಮೈಲಾಪುರ ಅಗಸಿ ಹತ್ತಿರದ ಸವಿತಾ ಸಮಾಜ ಸಮುದಾಯ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಸಂಘ (ಕುಷ್ಠ ಮತ್ತು ಕ್ಷಯರೋಗ) ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಕುಷ್ಠರೋಗ ಮತ್ತು ಕ್ಷಯರೋಗ ಪತ್ತೆ ಹಚ್ಚುವ ಹಾಗೂ ಚಿಕಿತ್ಸೆ ಆಂದೋಲನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಕುಷ್ಠರೋಗ ಒಂದು ಶಾಪವಲ್ಲ. ಜನರು ಈ ಮೂಢನಂಬಿಕೆಯಿAದ ಹೊರಬರಬೇಕು. ಕುಷ್ಠ ಮತ್ತು ಕ್ಷಯರೋಗ ಪತ್ತೆಗೆ ಒಟ್ಟು ೮೪೭ ತಂಡಗಳನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ಓರ್ವ ಆಶಾ ಕಾರ್ಯಕರ್ತೆ ಮತ್ತು ಒಬ್ಬ ಪುರುಷ ವಾಲೆಂಟೀರ್ ಇರುತ್ತಾರೆ. ಐದು ತಂಡಗಳಿಗೆ ಒಬ್ಬರಂತೆ ೧೬೮ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ತಂಡ ದಿನಕ್ಕೆ ೨೦ ಮನೆಗಳಿಗೆ ಭೇಟಿ ನೀಡಲಿದೆ. ಆಂದೋಲನ ಯಶಸ್ವಿಗೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಅವರು ಕೋರಿದರು.
ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಕುಷ್ಠರೋಗವು ನೋವು ರಹಿತವಾಗಿರುವ ಕಾಯಿಲೆಯಾಗಿದ್ದು “ಮೈಕೊಬ್ಯಾಕ್ಟೀರಿಯಂ ಲೆಪ್ರೆ” ಎಂಬ ರೋಗಾಣುವಿನಿಂದ ಬರುತ್ತದೆ. ಈ ರೋಗ ಕಾಣಿಸಿಕೊಳ್ಳಲು ೨ ವಾರದಿಂದ ೨೫ ವರ್ಷ ಬೇಕು. ವಂಶಪಾರAಪರಿಕವಾಗಿ ಹರಡುವುದಿಲ್ಲ. ಆದರೆ, ಚಿಕಿತ್ಸೆ ಹೊಂದದ ಕುಷ್ಠರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಬ್ಯಾಕ್ಟೀರಿಯಾದಿಂದ ಕುಟುಂಬದಲ್ಲಿ ಅಥವಾ ಯಾರಿಗೆ ಬೇಕಾದರೂ ಈ ರೋಗ ಹರಡಬಹುದು ಎಂದು ತಿಳಿಸಿದರು.
ಯಾವುದೇ ವ್ಯಕ್ತಿಯ ಚರ್ಮದ ಬಣ್ಣ ಬದಲಾಗುವುದು, ದಪ್ಪವಾಗುವುದು, ಮಿಂಚುವುದು, ಎಣ್ಣೆ ಚರ್ಮ, ಗಂಟುಗಳಾಗುವುದು, ಕಣ್ಣುಗಳನ್ನು ಮುಚ್ಚಲು ಸಾಧ್ಯವಾಗದಿರುವುದು, ಕೈಯಲ್ಲಿ ಹುಣ್ಣು, ಪಾದ ಮತ್ತು ಕೈಬೆರಳುಗಳು ಮಡಿಚಿರುವುದು, ಕೈಗಳಲ್ಲಿ ಮತ್ತು ಪಾದಗಳಲ್ಲಿ ಸಂವೇದನೆಯ ನಷ್ಟ ಕುಷ್ಠರೋಗದ ಲಕ್ಷಣಗಳಾಗಿವೆ. ಆಂದೋಲನದಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಇದೆ ಅಥವಾ ಇಲ್ಲ ಎಂಬುದನ್ನು ಆಶಾ ಕಾರ್ಯಕರ್ತೆ ಮತ್ತು ಪುರುಷ ವಾಲೆಂಟೀರ್ ಪರೀಕ್ಷೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ಶೇ.೧೦೦ರಷ್ಟು ಗುಣಮುಖ: ಕುಷ್ಠರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದ್ದು, ಭಯ ಪಡುವ ಅಗತ್ಯವಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ದೊರೆಯುತ್ತದೆ. ಚಿಕಿತ್ಸೆಯ ಅವಧಿ ೬ರಿಂದ ೧೨ ತಿಂಗಳು ಇದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ಕಾಯಿಲೆ ಹೊಂದಿದವರನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.೧೦೦ರಷ್ಟು ಗುಣಮುಖವಾಗುತ್ತಾರೆ. ಆದರೆ, ಮೈಕೊಬ್ಯಾಕ್ಟೀರಿಯಂ ಲೆಪ್ರೆ ರೋಗಾಣು ಹರಡಿದ ವ್ಯಕ್ತಿಯು ಪ್ರಾರಂಭಿಕ ಹಂತ (ಪಿಬಿ-ಪಾಸಿಬೆಸಿಲ್ಲರಿ ಹಂತ)ದಲ್ಲಿ ಚಿಕಿತ್ಸೆ ಪಡೆಯದಿದ್ದರೆ ೧೮ ತಿಂಗಳ ನಂತರ ಅದು ಕುಷ್ಠರೋಗ (ಎಂಬಿ-ಮಲ್ಟಿಬೆಸಿಲ್ಲರಿ)ವಾಗಿ ಪರಿವರ್ತನೆಗೊಳ್ಳುತ್ತದೆ. ತದನಂತರ ವ್ಯಕ್ತಿಯಲ್ಲಿ ೧೫ ದಿನದಿಂದ ೧ ತಿಂಗಳಲ್ಲಿ ಅಂಗವಿಕಲತೆ ಉಂಟಾಗಬಹುದು ಎಂದು ಡಾ.ಭಗವಂತ ಅನವಾರ ಅವರು ವಿವರಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಗುರುರಾಜ ಹಿರೇಗೌಡ್ರು ಅವರು ಮಾತನಾಡಿ, ಕ್ಷಯರೋಗ (ಟಿ.ಬಿ)ವು ಗಾಳಿ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದನ್ನು ಬೇಗ ಪತ್ತೆ ಮಾಡಿದರೆ ಶೇ.೧೦೦ರಷ್ಟು ಗುಣಪಡಿಸಬಹುದು. ಕ್ಷಯ ರೋಗಿಗಳು ವೈದ್ಯರು ಸಲಹೆ ನೀಡಿದಂತೆ ಅವಧಿ (೬ ತಿಂಗಳು, ೮ ತಿಂಗಳು, ೨ ವರ್ಷ ಕೋರ್ಸ್) ಪೂರ್ಣ ಕಡ್ಡಾಯವಾಗಿ ಔಷಧಿ ತೆಗೆದುಕೊಳ್ಳಬೇಕು. ಈ ಕೋರ್ಸ್ ಮಧ್ಯದಲ್ಲಿ ಆರೋಗ್ಯ ಸುಧಾರಣೆ ಕಂಡುಬAದರೂ ಯಾವುದೇ ಕಾರಣಕ್ಕೂ ಔಷಧಿ ತೆಗೆದುಕೊಳ್ಳುವುದನ್ನು ಬಿಡಬಾರದು ಎಂದು ಸಲಹೆ ನೀಡಿದರು.
ಎರಡು ವಾರ ಕೆಮ್ಮಿದರೆ ಆಸ್ಪತ್ರೆಗೆ ಭೇಟಿ ನೀಡಿ: ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು, ಜ್ವರ ವಿಶೇಷವಾಗಿ ರಾತ್ರಿ ವೇಳೆ ಬರುವುದು, ತೂಕ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಆಂದೋಲನದಲ್ಲಿ ಈ ಲಕ್ಷಣಗಳಿರುವ ಜನರ ಕಫ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಗುವುದು. ಕ್ಷಯರೋಗ ಶ್ವಾಸಕೋಶಗಳಿಗಷ್ಟೇ ಅಲ್ಲದೆ, ದೇಹದ ಇತರೆ ಭಾಗಗಳಿಗೂ ಹರಡಬಹುದು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮಿದರೆ ಸಾರ್ವಜನಿಕರು ನಿರ್ಲಕ್ಷö್ಯ ವಹಿಸದೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಅವರು ತಿಳಿಸಿದರು.
ಪ್ರತಿ ಕ್ಷಯರೋಗಿಗೆ ಪೌಷ್ಟಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಮಾಸಿಕ ೫೦೦ ರೂ. ಗೌರವಧನವನ್ನು ಪೂರ್ಣ ಚಿಕಿತ್ಸೆ ಆಗುವವರೆಗೂ ನೀಡಲಾಗುವುದು. ಕ್ಷಯರೋಗಿಯ ಅಧಿಸೂಚನೆ ಮಾಡಿದ ಮಾಹಿತಿದಾರರಿಗೆ ೫೦೦ ರೂ. ಗೌರವಧನ ನೀಡಲಾಗುವುದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹಣಮಂತರೆಡ್ಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಆರೋಗ್ಯ ಸಹಾಯಕ ಮಹಿಪಾಲರೆಡ್ಡಿ ಅವರು ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕ ಶರಣಬಸಪ್ಪ ಹೊಸಮನಿ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...