ಬುಧವಾರ, ಸೆಪ್ಟೆಂಬರ್ 18, 2019

ಕೃಷಿ ವಿಜ್ಞಾನ ಕೇಂದ್ರದಿಂದ ಸಾವಿರ ಗಿಡ ನೆಡುವ ಅಭಿಯಾನ
ಯಾದಗಿರಿ, ಸೆಪ್ಟೆಂಬರ್ ೧೮ (ಕರ್ನಾಟಕ ವಾರ್ತೆ): ಜಿಲ್ಲೆಯ ಕವಡಿಮಟ್ಟಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಪ್ರಧಾನಮಂತ್ರಿಗಳ ಜನ್ಮದಿನದ ಅಂಗವಾಗಿ ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಕಾಳಜಿಯನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಇಫ್ಕೊ ರಸಗೊಬ್ಬರಗಳ ಸಂಸ್ಥೆಯೊಂದಿಗೆ ಸಾವಿರ ಗಿಡಗಳನ್ನು ನೆಡುವ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಕೆಂಗನಾಳ ಅವರು ಮಾತನಾಡಿ, ಹೆಚ್ಚುತ್ತಿರುವ ಬರಗಾಲಗಳನ್ನು ತಡೆಯಲು ಮತ್ತು ಸಕಾಲದಲ್ಲಿ ಮಳೆಯಾಗಲು ಅರಣ್ಯ ಸಂರಕ್ಷಣೆ ಅತ್ಯವಶ್ಯಕವಾಗಿದೆ. ಪ್ರತಿಯೊಬ್ಬ ರೈತರು ಕೇವಲ ಗಿಡ ಕಡಿಯುವುದನ್ನು ಮಾತ್ರ ಮಾಡದೆ ಪ್ರತಿ ಎಕರೆ ಭೂಮಿಗೆ ಕನಿಷ್ಠ ೧೦ ಗಿಡಗಳನ್ನು ನೆಡಬೇಕು ಎಂದು ತಿಳಿಸಿದರು.
ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಮೋಹನ ಚವ್ಹಾಣ ಅವರು ಮಾತನಾಡಿ, ಗಿಡಗಳನ್ನು ನೆಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಾವು ಉಸಿರಾಡುವ ಗಾಳಿ ಶುದ್ಧವಾಗಿರಬೇಕೆಂದರೆ ಮರಗಳು ಅಗತ್ಯ. ಈಗಾಗಲೇ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಉಸಿರಾಡಲು ಶುದ್ಧ ಗಾಳಿಯೂ ದೊರೆಯದಿದ್ದರೆ ಜೀವಸಂಕುಲಗಳ ಬದುಕು ವಿನಾಶದೆಡೆಗೆ ಸಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ಆದಷ್ಟು ಮಟ್ಟಿಗೆ ತಮಗೆ ಅವಶ್ಯಕ ಬೆಳೆಗಳನ್ನು ಬೆಳೆಯದೇ, ಇತರೆ ಪ್ರಾಣಿ- ಪಕ್ಷಿಗಳಿಗೆ ಸಹಾಯಕವಾಗುವ ಮತ್ತು ಮುಂದಿನ ಪೀಳಿಗೆಗೆ ಕೊಡಬಹುದಾದ ಗಿಡಗಳನ್ನು ಬೆಳೆಸಬೇಕು. ಅಮೂಲ್ಯ ಸಂಪತ್ತಾದ ಕಾಡನ್ನು ಎಲ್ಲರೂ ಸಂರಕ್ಷಿಸೋಣ ಎಂದು ಸಲಹೆ ನೀಡಿದರು.
ರೈತರಿಗೆ ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ತಯಾರಿ, ಬೀಜೋಪಚಾರ, ಸಸ್ಯ ಸಂರಕ್ಷಣೆ ಮುಂಜಾಗ್ರತೆಗಳ ಮಾಹಿತಿ ಮತ್ತು ಪ್ರಸಕ್ತ ಹತ್ತಿ, ತೊಗರಿ ಹಾಗೂ ಭತ್ತ ಬೆಳೆಗಳ ಬಗ್ಗೆಯೂ ಸಹ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಂಜಲಾಪೂರ, ಕವಡಿಮಟ್ಟಿ, ಗುಡಿಹಾಳ ಮತ್ತು ಚಂದಲಾಪೂರ ಗ್ರಾಮದ ರೈತರು ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರದ ಡಾ.ಮಹೇಶ, ಶ್ರಿÃದೇವಿ, ಸುಮಂಗಲಾ, ಮಾಳಗಿ, ಮಲ್ಲಿಕಾರ್ಜುನ ಸ್ವಾಮಿ, ಶಶಿಧರ ರೆಡ್ಡಿ, ಸುರೇಶ ಮತ್ತು ಇತರೆ ಕಾರ್ಮಿಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...